Posts

Showing posts from 2012

ಬರ್ಫಿ - ಮುಗ್ಧ ಪ್ರೇಮದ ಹಲವು ಮುಖಗಳು

Image
ದೈಹಿಕ/ಮಾನಸಿಕ ದೌರ್ಬಲ್ಯಗಳುಳ್ಳ ಪಾತ್ರಗಳನ್ನೇ ಕೇಂದ್ರವಾಗಿರಿಸಿಕೊಂಡು ಬಾಲಿವುಡ್‍ನಲ್ಲಿ ಸಾಕಷ್ಟು ಚಿತ್ರಗಳು ಬಂದಿದ್ದರೂ, ಅವುಗಳಲ್ಲಿ ಪರಿಣಾಮಕಾರಿ ಕಥನ ಮತ್ತು ನಿರೂಪಣೆಯುಳ್ಳ ಚಿತ್ರಗಳು ಬೆರಳೆಣಿಕೆಯಷ್ಟು."ಸದ್ಮಾ" ಚಿತ್ರದಲ್ಲಿನ ಶ್ರೀದೇವಿ ಮತ್ತು ಕಮಲ್ ಹಾಸನ್ ರ ಅಭಿನಯವನ್ನು ಜನರು ಇಂದಿಗೂ ಮೆಚ್ಚುಗೆಯಿಂದ ನೆನೆಸಿಕೊಳ್ಳುತ್ತಾರೆ. "ಪಾ", "ಮೈ ನೇಮ್ ಈಸ್ ಖಾನ್"‍ನಂಥ ಚಿತ್ರಗಳು ಬಂದಿವೆಯಾದರೂ ಅವುಗಳಲ್ಲಿನ "ದೌರ್ಬಲ್ಯ ಪೀಡಿತ" ಪಾತ್ರಗಳು ಆಪ್ತವಾಗಿ ಉಳಿಯಲಿಲ್ಲ. "ಘಜಿನಿ" ಚಿತ್ರದಲ್ಲಿ ನೆನಪು-ಮರೆವುಗಳ ನಡುವೆ ಸಿಲುಕಿ ತಲ್ಲಣಿಸುವ ಪಾತ್ರವಿದ್ದರೂ, ಪ್ರೇಯಸಿಯ ಸಾವಿನ ಸೇಡಿನ ವೈಭವೀಕರಣ ಪಾತ್ರದ ಬೇರೆ ವೈಶಿಷ್ಟ್ಯಗಳನ್ನು ಮಾಸಲುಗೊಳಿಸಿತ್ತು. ಆದರೂ ಇತ್ತೀಚಿನ "ತಾರೆ ಝಮೀನ್ ಪರ್" ಮತ್ತು ಸುಮಾರು ಒಂದು ದಶಕದ ಹಿಂದೆ ತೆರೆಕಂಡಿದ್ದ "ಬ್ಲಾಕ್" ಚಿತ್ರಗಳು ಈ ನಿಟ್ಟಿನಲ್ಲಿ ಪ್ರಶಂಸೆ ಹಾಗೂ ಮೆಚ್ಚುಗೆ ಪಡೆದ ಚಿತ್ರಗಳು. ಮಾರುಕಟ್ಟೆಯ ಸೂತ್ರಗಳಿಗೆ ತಕ್ಕ ರಂಜಕ ಗುಣಗಳ ಮೇಲೆಯೇ ಪ್ರಾಶಸ್ತ್ಯ ನೀಡುವುದರಿಂದಲೋ ಅಥವಾ ಥಳುಕು-ಬಳುಕು, ತಾರಾ ವರ್ಚಸ್ಸು, ನಾಟಕೀಯತೆ, ವೈಭವೀಕರಣಗಳ ವಿಪರೀತ ವ್ಯಾಮೋಹದಿಂದಲೋ ಬಹುತೇಕ ನಿರ್ದೇಶಕರು ಸಿನೆಮಾದ ಸಿದ್ಧ ಮಾದರಿಗಳಿಗೆ ಶರಣಾಗಿರುವುದಂತೂ ಸುಳ್ಳಲ್ಲ. ಎರಡು ವಾರಗಳ ಕೆಳಗೆ ಬಿಡುಗಡೆಗೊಂಡಿರುವ "ಬರ್ಫಿ&qu

ಮಾತು-ಮೌನ-ಮನಸ್ಸು

ಮಾತು ಮಾತುಗಳ ನಡುವೆ ಅದೆಲ್ಲಿಂದ ಬಂದು ಕೂರುವುದೊ ಕ್ರೂರ ಮೌನದ ಪದರ!? ಯಾವ ಮುಲಾಜೂ ಇಲ್ಲ ಯಾವ ದನಿಯೂ ಬೇಕಿಲ್ಲ ಅದಕೆ! ನಲ್ಮೆಯ ಮಾತು, ಕೋಪದ ಮಾತು ಸವಿ ನುಡಿ ಕಹಿ ನುಡಿ ಹೇಳಲೇ ಬೇಕೆಂದಿದ್ದ ಬಾಯಿ, ಆಲಿಸಲೆಂದೇ ಕಾದಿದ್ದ ಕಿವಿಗಳು ಎಲ್ಲವನೂ ಹೆಡೆಮುರಿಕಟ್ಟಿ ಹೊಸಕಿ ನಿಲ್ಲುತ್ತದೆ! ಮೌನಕೂ ಇರಬೇಕಿತ್ತು ಅಂತಃಕರಣ! ಕಾರಿರುಳ ಕತ್ತಲೆಯ ಬೆಂಬಲಕೆ ನಿಂತ ದುರುಳ ಗಾಳಿ ಹಚ್ಚಲು ಹೊರಟ ಹಣತೆಯ ಬಲಿತೆಗೆದುಕೊಳ್ಳುವುದು ಇಲ್ಲೂ, ಚೀತ್ಕಾರವೆಲ್ಲ ಆಕಾಶದೊಳು ಲೀನವಾಗುತಿರಲು ದೈನ್ಯದಲೆ ಬೇಡಲು ಹೊರಟ ಮಾತಿನ ಪ್ರಾಣಪಕ್ಷಿ ಹಾರಿಸಲು ಮೌನಕೆ ಬಿಗುಮಾನ ಜೊತೆಯಾಗಿದೆ ಆಕಾಶದ ವಿಸ್ತಾರಕೆ ಮೋಡಗಳು ಹೆದರುವುದುಂಟೆ! ಎಲ್ಲೆಲ್ಲಿಂದಲೋ ಒಟ್ಟುಗೂಡಿ ತಮ್ಮ ಪಾಡಿಗೆ ತಾವು ಹೆಪ್ಪುಗಟ್ಟಿ ಭಾರ ತಾಳಲಾರದೇ ಮಳೆಯಾಗಿ ಇಳೆಯ ಮಡಿಲು ಸೇರುವುವುವಲ್ಲವೆ! ಮೌನಕೂ ಮಾತಿಗೂ ಮನಸ್ಸಿನದೇ ಹಂಗು ನಿಜ ನಾಟಕದ ಮಧ್ಯದಲಿ ಸೂತ್ರಧಾರನ ಕಪಟ ನಾಟಕ ಮುಂದಡಿಯಿಡುವುದೇ ಮನಸ್ಸು ಮಾತುಗಳನು ಪ್ರಚಂಡ ಪ್ರವಾಹವಾಗಿಸಲು! ಮೌನದ ಅಣೆಕಟ್ಟನು ಸಿಡಿಸಿ ಚೂರಾಗಿಸಲು!?

ಬೀದಿ ಬದಿಯ ಬಾಣಸಿಗ

ಕಾದು ಹಬೆಯಾಡುವ ಕಾವಲಿ ಅತ್ತಿಂದಿತ್ತ ಪುಟು ಪುಟು ಹೆಜ್ಜೆಯಿಡುವ ಮಾಣಿಗಳ ನಡುವೆ ಬಂದ ಬಂದವರ ಹಸಿವು ನೀಗಿಸಲು ನಿಂತಿಹನು ಬಾಣಸಿಗ ನಿಗಿ ನಿಗಿ ಕಾವಲಿಯ ಶಾಖದಲಿ ಬೆಚ್ಚಗಿರಿಸಿಟ್ಟಿರುತ್ತಾನೆ ತನ್ನ ಕನಸುಗಳ ಅದಾವ ಬೇಸರ ಮೂಡುವುದೋ ಅವೇ ಕನಸುಗಳು ಸಾಕೆನಿಸಿ ಬೊಗಸೆ ತುಂಬ ನೀರು ಚಿಮುಕಿಸುವನು ಧುಸ್‌ಸ್‌ಸ್‌ಸ್!!!! ಅಷ್ಟೆ! ಪೊರಕೆಯ ಬೀಸಿನಲಿ ಎಲ್ಲವನು ಬದಿಗೊತ್ತಿ ಹೊಸ ಕನಸುಗಳ ಹುದುಗಿಸಿಡುವನು ಕಯ್ಯೊಳರಳುವ ಬಗೆ ಬಗೆ ಪಾಕ ಇಳಿವ ಗಂಟಲಾವುದೊ? ಆರಿಸುವ ಕ್ಷುದಾಗ್ನಿ ಯಾರದೊ? ಮತ್ತೆ ಉಸಿರು ಪಡೆವ ಜೀವ ಯಾವುದೊ?! ಹೆಸರು, ಗುರುತು, ನಂಟುಗಳ ಬಾಹಿಗೆಯಲಿ ಸಾಗುವ ಕೈಂಕರ್ಯ! ತಿನಿಸನರಸಿ ಬರುವ ಹೊಸ ಹೊಸ ಮುಖಗಳು ಮಾತು, ಮುಗುಳ್ನಗು ವಿನಿಮಯಗೊಳ್ಳವು ಸುಲಭಕೆ ತಟ್ಟೆ ಇವನ ಕೈಗಳ ದಾಟಿ ಅವರ ಕೈಸೇರಿದೊಡನೆ ಅವರು ತೆತ್ತ ದುಡ್ಡು ಇವನ ಋಣ ತೀರಿಸಿಬಿಡುವುದಂತೆ!!!

ಶುಕ್ರ ಸಂಕ್ರಮಣ

ಜೂನ್ ೬, ೨೦೧೨ ರಂದು ಒಂದು ಅಪರೂಪದ ವಿದ್ಯಮಾನ ಅಂತರಿಕ್ಷದಲ್ಲಿ ಸಂಭವಿಸಲಿದೆ. ಅದನ್ನು ನೇರವಾಗಿ ವೀಕ್ಷಿಸುವ ಅವಕಾಶ ಹೊಂದಿರುವ ನಾವೆಲ್ಲ ಅದೃಷ್ಟವಂತರೇ ಸರಿ! ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು, ಹವ್ಯಾಸಿಗಳು, ವೃತ್ತಿಪರರು, ವಿಜ್ಞಾನಾಸಕ್ತರು ಮತ್ತು ಸಾಮಾನ್ಯ ಜನತೆ ಕೂಡ ಅಂತರಿಕ್ಷದಲ್ಲಿ ನಡೆಯಲಿರುವ ಈ ದೃಶ್ಯ ಚಮತ್ಕಾರದ ವೀಕ್ಷಣೆಯ ಪ್ರತಿಕ್ಷಣವನ್ನೂ ಆನಂದಿಸಲು ಅಣಿಯಾಗುತ್ತಿದ್ದಾರೆ. ಅದುವೆ "ಶುಕ್ರ ಗ್ರಹದ ಸಂಕ್ರಮಣ"! ಶುಕ್ರ ಗ್ರಹವು ಕಪ್ಪು ಚುಕ್ಕಿಯಂತೆ ಸೂರ್ಯನ ಮೇಲೆ ಮಂದವಾಗಿ ಹಾದುಹೋಗಲಿದೆ ಮತ್ತು ಈ ಚಲನೆಯ ದೃಶ್ಯ ಸೂರ್ಯೋದಯದಿಂದ ಬೆಳಿಗ್ಗೆ ೧೦.೩೦ರ ವರೆಗೆ ಗೋಚರಿಸಲಿದೆ. ಈ ವಿದ್ಯಮಾನ ಯಾಕೆ ಅಪರೂಪ ಮತ್ತು ನಾವೇಕೆ ಇದನ್ನು ವೀಕ್ಷಿಸಬಹುದಾದ ಭಾಗ್ಯಶಾಲಿಗಳು? ಜೂನ್ ೬, ೨೦೧೨ ರಂದು ಇದರ ವೀಕ್ಷಣೆ ತಪ್ಪಿಸಿಕೊಂಡಲ್ಲಿ ನಾವಿದನ್ನು ನಮ್ಮ ಜೀವಮಾನದುದ್ದಕ್ಕೂ ನೋಡಲಾರೆವು. ಕಾರಣ ಇದು ಮತ್ತೆ ಸಂಭವಿಸಲಿರುವುದು ೧೧ ಡಿಸೆಂಬರ್, ೨೧೧೭ಕ್ಕೆ. ಈ ಹಿಂದೆ ಇದೇ ರೀತಿಯ ಘಟನೆ ನಡೆದದ್ದು ಜೂನ್ ೮, ೨೦೦೪ರಲ್ಲಿ.  ಇದು ಲೆಕ್ಕಾಚಾರ ಅಥವಾ ಇನ್ನಾವುದೇ ಅಳತೆಗೆ ಸಿಗದ ಯಾದೃಚ್ಛಿಕ ವಿದ್ಯಮಾನವಲ್ಲ. ಇದಕ್ಕೊಂದು ಕ್ರಮವಿದೆ. ಶುಕ್ರ ಸಂಕ್ರಮಣವು ೮ ವರ್ಷಗಳ ಅಂತರವಿರುವ ಜೋಡಿ ಇಸವಿಗಳಲ್ಲಿ ಸಂಭವಿಸುತ್ತದೆ. ಮಾತ್ರವಲ್ಲದೆ ಈ ಜೋಡಿ ಇಸವಿಗಳ ನಡುವಿನ ಅಂತರ ೧೨೧.೫ ಮತ್ತು ೧೦೫.೫ ವರ್ಷಗಳಂತೆ ಅದಲು ಬದಲಾಗುತ್ತಿರುತ್ತದೆ. ಈ ಕ

ಅಪಭ್ರಂಶ

ಮಧ್ಯಾಹ್ನ ಆವರಿಸಲು ಇನ್ನೇನು ಒಂದೇ ತಾಸು ಬಾಕಿಯಿದ್ದರೂ ಮಾಗಿಯ ಚಳಿ ಮಾತ್ರ ಗಾಳಿಯಲ್ಲಿ ಹಾಗೆಯೇ ಅಡಗಿತ್ತು. ಫ಼ುಟ್ಪಾತಿನ ಮೇಲೆ ನಡೆಯುವಾಗ ಬಿಸಿಲಿನಿಂದ ನೆರಳೊಳಗೆ ನುಸುಳಿದಂತೆಲ್ಲ ಅರ್ಧ ಅಂಗಿ ತೊಟ್ಟ ಶ್ಯಾಮನ ಕೈ ಮೇಲಿನ ಒಡೆದ ಚರ್ಮ ಹಿಗ್ಗಿದಂತಾಗಿ ಸಣ್ಣಗೆ ಚಿಟಿ ಚಿಟಿ ಉರಿದು ಅಹಿತವುಂಟು ಮಾಡುತ್ತಿತ್ತು. ಬಸ್ ಸ್ಟಾಪ್ ಇನ್ನು ೧೦ ನಿಮಿಷಗಳ ಕಾಲ್ನಡಿಗೆಯಷ್ಟು ದೂರ. ಯಾವಾಗಲೂ ಆಫೀಸು ಮುಗಿಸಿಕೊಂಡು ಶುಕ್ರವಾರ ರಾತ್ರಿಯೇ ಬಸ್ಸು ಹತ್ತಿ ಮಧ್ಯರಾತ್ರಿಯಲ್ಲಿ ದುರ್ಗ ಸೇರಿಬಿಡುತ್ತಿದ್ದ ಶ್ಯಾಮ ಈ ಬಾರಿ ಮಾತ್ರ ಊರಿಗೆ ಹೋಗುವುದೋ ಬೇಡವೋ ಎಂಬ ದ್ವಂದ್ವದಲ್ಲೇ ಹಿಂದಿನ ಮಧ್ಯರಾತ್ರಿಯವರೆಗೂ ಒದ್ದಾಡಿ ಹಾಗೆಯೇ ನಿದ್ದೆ ಹೋಗಿದ್ದ. ಬೆಳಿಗ್ಗೆ ತಡವಾಗಿ ಎದ್ದು ಹಾಸಿಗೆಯ ಮೇಲೆ ಕೂತವನೇ ಒಂದು ದೀರ್ಘವಾದ ಉಸಿರು ತೆಗೆದುಕೊಳ್ಳುತ್ತಾ ಹೊರಟೇಬಿಡುವುದೆಂದುಕೊಂಡವನು ಸ್ನಾನ ಮುಗಿಸಿ, ತಿಂಡಿಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಹೆಗಲಚೀಲವನ್ನೇರಿಸಿಕೊಂಡು ಹೊರಬಿದ್ದಿದ್ದ. ಪ್ರತಿ ಬಾರಿಯೂ ದುರ್ಗಕ್ಕೆ ಹೊರಡುವಾಗ, ಶಹರದ ಧೂಳು, ಹೊಗೆ, ಒತ್ತಡಗಳ ಜಂಜಡಗಳಿಂದ ತುಸು ಕಾಲ ಬಿಡುಗಡೆ ಹೊಂದುವ ತಹತಹದಲ್ಲಿ ಹೊರಟು, ಮತ್ತೆ ಮನೆಯವರನ್ನೆಲ್ಲ ಕಂಡ ಹುರುಪಿನೊಂದಿಗೆ ನವೀಕರಣಗೊಂಡ ಯಂತ್ರದಂತಾಗಿ ಹಿಂತಿರುಗಿ ಬರುತ್ತಿದ್ದ ಶ್ಯಾಮ. ಈ ಬಾರಿ ಯಾಕೋ ಬೆಂಗಳೂರಿನ ಯಾಂತ್ರಿಕ ಬದುಕಿನೆದುರು ಅಲ್ಲಿಗೆ ಹೋಗಿ ಬರುವುದೇ ಸಪ್ಪೆಯೆನಿಸತೊಡಗಿತ್ತು ಅವನಿಗೆ. ಅಪ್ಪನಿಗೆ ವಾದಿ ಮ

ಹೈಟೆಕ್ ಕಾರ್ಮಿಕರು

ಭಾರತವನ್ನೂ ಒಳಗೊಂಡು ಪ್ರಪಂಚದ ಸುಮಾರು ೮೦ ದೇಶಗಳಲ್ಲಿ ಮೇ ೧ ರಂದು ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತದೆ. ಅಂದು ಆ ಎಲ್ಲಾ ದೇಶಗಳಲ್ಲಿ ರಾಷ್ಟ್ರೀಯ ರಜಾ ದಿನ. ಕಾರ್ಮಿಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ವಿಶ್ವ ಕಾರ್ಮಿಕರ ದಿನಾಚರಣೆಯ ಮೂಲ ಧ್ಯೇಯಗಳಲ್ಲಿ ಒಂದು. ವಿವಿಧ ಕಾರ್ಮಿಕ ಪರ ಸಂಘ ಸಂಸ್ಥೆಗಳು ಈ ದಿನದಂದು ಸಮಾವೇಶ, ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡು ಕಾರ್ಮಿಕರ ಬದುಕು-ಬವಣೆ, ಹಕ್ಕುಗಳ ಕುರಿತು ಚಿಂತಿಸುವುದು ಇದರ ವಿಶೇಷ. ಐಟಿ ಉದ್ದಿಮೆಯ ಸಂದರ್ಭದಲ್ಲಿ ಕಾರ್ಮಿಕರ ದಿನಾಚರಣೆಯು ಬಹಳಷ್ಟು ಐಟಿ ಉದ್ಯೋಗಿಗಳಿಗೆ ಬೇರೆ ಎಲ್ಲ ರಜಾದಿನಗಳಂತೆ ಮತ್ತೊಂದು ರಜೆಯಷ್ಟೆ. ಖಾಸಗಿ ವಲಯದ ಇತರೆ ಉದ್ದಿಮೆಗಳಲ್ಲಿರುವ ಕಾರ್ಮಿಕರಿಗೆ ಹೋಲಿಸಿದರೆ, ಐಟಿ ಕಾರ್ಮಿಕರಲ್ಲಿ ಕಾರ್ಮಿಕರ ದಿನಾಚರಣೆ ಹಾಗೂ ಹಕ್ಕುಗಳ ಮಹತ್ವದ ಬಗೆಗಿನ ಜಾಗೃತಿ ನಿರಾಸೆ ಮೂಡಿಸುವಷ್ಟು ಕಡಿಮೆಯಿದೆ. ಕೆಲ ಐಟಿ ಕಂಪನಿಗಳಲ್ಲಿ ಈ ದಿನವನ್ನು ಐಚ್ಛಿಕ ರಜೆಯನ್ನಾಗಿಸಿರುವುದು ಈ ದಿನದ ಬಗೆಗೆ ಐಟಿ ಕಂಪನಿಗಳು ತಳೆದಿರುವ ನಿಲುವನ್ನು ಎತ್ತಿ ಹಿಡಿಯುತ್ತದೆ. ಐಟಿ ಮಂದಿ ತಮ್ಮನ್ನು ತಾವು ಕಾರ್ಮಿಕರೆಂದು ಗುರುತಿಸಿಕೊಳ್ಳುವುದರಲ್ಲೇ ತುಸು ಹಿಂದುಳಿದಿದ್ದಾರೆಂದರೆ ತಪ್ಪಾಗಲಾರದು. ಹಾಗೇನಾದರೂ ಗುರುತಿಸಿಕೊಂಡರೂ ತಾವು ಮೇಲ್ವರ್ಗದ ಕಾರ್ಮಿಕರೆಂಬ ಭಾವನೆ ಇಲ್ಲಿನ ಉದ್ಯೋಗಿಗಳದ್ದು. ಇವರೆಲ್ಲ ಕಾರ್ಮಿಕ ವರ್ಗಕ್ಕೆ ಸೇರಿದರೂ "ಟೆಕ್ಕಿ" ಎಂಬ ಸಂಭಾವಿತ ಗುಂಪಿಗೆ ಪ

ಒಲವಿನ ನದಿಯ ಪಾತ್ರ

ನಿನ್ನ ಒಲವಿನ ನದಿಯ ಪಾತ್ರ ಸ್ನೇಹಮಯ ಜೀವನ ಸೂತ್ರ ಪ್ರೇಮಲ ಭಾವದಿ ನೀ ಹಾಡಿರಲು ಹೊಳೆದಿಹುದು ಮಂಜಿನಲಿ ಬೆಳಕ ಕೋಲು ತುಂಬು ಮಮತೆಯ ವಾಹಿನಿ ಸದಾ ನನ್ನ ಧೃತಿ ಸಂಜೀವಿನಿ ನಿದ್ರಿಸಲು ನಿನ್ನ ಮಡಿಲೊಳು ನೀನಾಗಿಹೆ ಕನಸಿನ ಯಾಮಿನಿ ನಮ್ಮ ಬಾಳ ನಾವೆಯಿದೆ ನಿನ್ನ ನೇಹ ಸರೋವರದಿ ಹುಟ್ಟಿಹುದು ನಿನ್ನ ಗಾನದಿ ಇಂಚರದ ರಸಪಾಕ ನಿನ್ನ ಸ್ವರಗಳು ಹನಿಗೂಡಿ ಒಡಲಲಿ ಅಲೆಗಳ ಶರಧಿ ಸಾಗರದ ನಾದದೊಳು ಮೈಮರೆತಿಹೆ ನಿನ್ನ ಧ್ಯಾನದಿ

ಬಿಟಿಎಂ ಲೇಔಟ್

ಅರೆ ನಿದ್ದೆಯ ಕಣ್ಣುರಿ ತುಂಬಿ ಸಂತೆಯ ಸಂದಣಿಯಲ್ಲಿ ದೂಡಿ ಕಿವಿಯಲ್ಲಿ ಉಸುರುತ್ತದೆ "ಓಡು ಮಗುವೆ ಬಸ್ಸಿನ ಛಾವಣಿಯ ಕಂಬಿಗೆ ಜೋತು ಬಿದ್ದು ನಿದ್ದೆಯ ದಣಿವಾರಿಸಿಕೊ ಮನೆಯ ಖಾಲಿ ಬಿಟ್ಟು ದಿನವೆಲ್ಲ ಒಂದಿಷ್ಟು ಬೆವರು ಸುರಿಸಿಕೊ ಮನೆಯಿರುವುದು ರಾತ್ರಿ ಉಂಡು ಮಲಗಲಷ್ಟೆ ಓಡಿನ್ನು ಬೇಗ ಗಿರಗಿರನೆ ತಿರುಗುವ ಚಕ್ರಗಳ ಮೇಲಿನ ಯಂತ್ರದ ರಥಗಳಿಂದ ಕಿಕ್ಕಿರಿದ ರಸ್ತೆಯನೊಮ್ಮೆ ನೋಡು ಜೊಂಪು ನಿದ್ದೆಗೂ ಬಿಡುವಿಲ್ಲ ಅದಕೆ ಹೋಗುತ್ತಲೇ ಕರಗಿಬಿಡು ಸಂತೆಯೊಳಗೆ ಹೋಗಿ ತೀರಿಸಿ ಬಾ ದಿನಕರನಂತೆ ದಿನಕ್ಕೆ ಕೊಡಬೇಕಿರುವ ನಿನ್ನ ಬಾಬ್ತು ಒಂದಿಷ್ಟು ಬೆಂದು ಒಂದಿಷ್ಟು ಉರಿದು ನಿನ್ನನೇ ನೀನು ತೀಡಿಕೊಂಡು ಒಂದಿಷ್ಟು ಹೊಳೆಯಬಲ್ಲೆಯೇನೋ ನೋಡು" ಸಂಜೆ ಸುರಿದ ಮೇಲೆ ಇರುಳ ಚಪ್ಪರ ಕಟ್ಟುತ್ತಲೇ ಬರ ಮಾಡಿಕೊಳ್ಳುತ್ತದೆ ಬಣ್ಣದಾಗಸ ನೋಡಲಾಗದ್ದಕ್ಕೆ ಮೈದಡವಿ ಸಂತೈಸುತ್ತದೆ ದುಡಿಮೆಯ ಕೀಲಿ ಕೊಡಿಸಿಕೊಂಡ ಬೊಂಬೆಗಳ ಹಣೆ ನೀವುತ್ತದೆ ಹೋಟೆಲಿನ ಮೇಜು ಒರೆಸುವ ಪೋರನ ಗುನುಗು ಗೀತೆಯಾಗುತ್ತದೆ ಮನೆ ಮುಟ್ಟಿಸಲು ಬಂದ ಕ್ಯಾಬ್ ಚಾಲಕನ ಇಷ್ಟದ ತಿರುವಾಗುತ್ತದೆ ಠೀವಿಯಾಗುತ್ತದೆ ಲಲನೆಯರ ನಡಿಗೆಯಲ್ಲಿ ತುಳುಕಾಡುತ್ತದೆ ಮೈದಾನದ ಮಕ್ಕಳ ಕೇಕೆಯಲ್ಲಿ ಉಡುಪಿ ಗಾರ್ಡನ್‌ನಿಂದ ಮಡಿವಾಳ ಕೆರೆ ಜಯದೇವದಿಂದ ತಾವರೆಕೆರೆ ಎಡಬಿಡದೆ ಎಲ್ಲರನಲೆಸಿ ಸಂತೆಯ ಲೀಲೆಯಲ್ಲಿ ಸಂಭ್ರಮಿಸುತ್ತದೆ ವಾಹನ ಸರಮಾಲೆ ಧರಿಸಿ ನರ್ತಿಸುತ್ತದೆ ಸಲಹುತ್ತದೆ

ಗಟ್ಟಿಮೇಳ

ಮದುವೆ ಮನೆಯಲ್ಲಿ ದೇವರೇ ಪ್ರತ್ಯಕ್ಷನಾದಂತೆ ಎದ್ದು ನಿಲ್ಲುತ್ತಾರೆ ಎಲ್ಲ ಗಟ್ಟಿ ಮೇಳದ ಅಲೆಗಳು ತೇಲಿಬಂದೊಡನೆ ಅಕ್ಷತೆ ಹಾಕುತ್ತಾರೆ ದಿಕ್ಕುಗೆಟ್ಟ ಕುರ್ಚಿಗಳಲಿ ಹರಟುತ್ತಿದ್ದವರೆಲ್ಲ ಉಕ್ಕುವ ಹಾಲನ್ನು ತಡೆಯಲು ಧಾವಿಸಿದವರಂತೆ ಅಲ್ಲಿಂದಲೆ ಮುಂದೆ ಓಡಿದಂತೆ ಎಸೆಯುತ್ತಾರೆ ಅಕ್ಕಿ ಕಾಳು ಮುಂದೆ ನಿಂತು ಕಣ್ಣು ಹನಿಸುವವರ ಮೇಲೆಯೇ ಮುಗಿಯಿತಿನ್ನು! ಹಠಾತ್ ದೊಡ್ಡವರಾಗಿಬಿಟ್ಟರು ವಧು-ವರರು ಘನ ಗಾಂಭೀರ್ಯದ ಮೂಟೆ ಹೊತ್ತೇ ಸಪ್ತಪದಿಯಿಡಬೇಕು ಅವರಿನ್ನು ಅವರ ನಡೆ ನುಡಿ ಉಸಿರು ನೋಟ ನಗು ಎಲ್ಲಕ್ಕೂ ಹೊಣೆಯ ಹೊರೆ ಅವಳು ಕೈ ಜೋಡಿಸಿದಳಷ್ಟೆ ಬಗ್ಗಿ ನಮಸ್ಕರಿಸಲಿಲ್ಲವಲ್ಲ! ಅವನಾಗಲೇ ಅವಳ ಸೆರಗ ಹಿಂಬಾಲಿಸುತ್ತಿದ್ದಾನಲ್ಲಾ! ಪಿಸುಗುಟ್ಟುತ್ತಿದ್ದಾರೆ ಮದುವೆ ಮನೆಯ ಗಳಗಳ ಮಾತುಗಳ ನಡುವೆ ಅಗ್ನಿಗೆ ಅರಳು ಹುಯ್ಯಲು ಬಾರದು ಅವಳಿಗೆ ಆಪೋಷಣೆಗೆ ಅಂಗೈ ಗುಳಿ ಮಾಡಲು ತಿಳಿಯದು ಅವನಿಗೆ ಇವರೆಂಥ ಸಂಸಾರ ಮಾಡಿಯಾರು! ಎನ್ನುತ್ತ ಹಪ್ಪಳದ ಪರಿಮಳಕ್ಕೆ ಸೋತು ಊಟದ ಪಂಕ್ತಿಯೊಳಗೆ ಉಪ್ಪಿನಕಾಯಿಯ ಮೆಚ್ಚಿಕೊಂಡರು ಎಲೆ ಅಡಿಕೆ ಮೆಲ್ಲುತ್ತ ನವ ದಂಪತಿಗಳಿಗೆ ಆಶೀರ್ವದಿಸುತ್ತಾರೆ ಶೀಘ್ರಮೇವ ಸಂತಾನಪ್ರಾಪ್ತಿರಸ್ತು ಹುಡುಗಾಟಿಕೆ ಸಲ್ಲದು ಮುಂದೆ ಎಲ್ಲೂ ತಪ್ಪದೆ ಎಲ್ಲ ನಿಭಾಯಿಸಬೇಕೆಂದು ಚಿತಾವಣೆ ಕೊಡುತ್ತಾರೆ ಮದು"ಮಕ್ಕಳೇ", ಭೂಮದೂಟಕ್ಕೇಳಿ ಯಾರೋ ಕೂಗುತ್ತಾರೆ ಯಾವ ಮಕ್ಕಳೆಂದು ತಬ್ಬಿಬ್ಬಿನಲ್ಲಿ ಇಬ್ಬರೂ ಮುಖ

ನಿಶ್ಚಿತಾರ್ಥ

ಯಾವ ದೇವತೆಯ ಸಾಕ್ಷಿಯನ್ನೂ ಬೇಡದೇ ಇನ್ನಾವ ನಕ್ಷತ್ರದ ಕೃಪೆ ಯಾಚಿಸದೇ ನನ್ನೊಳು ನೀನು ನಿನ್ನೊಳು ನಾನು ಕಂಡುಕೊಂಡ ಸಖರು ಅಭಿಸಾರಗೊಂಡರು ಗೃಹಸ್ಥದ ಹೊಸ್ತಿಲೆಡೆದೆ ಹೆಜ್ಜೆಯಿಟ್ಟರು ಭಾವಿ ಪತಿ ಪತ್ನಿಯರೆಂದು ಬೆರಳುಗಳಲಿ ಬೆರಳುಗಳ ಹೆಣೆದರು ತಾರುಣ್ಯದ ಬಳ್ಳಿಯಲೊಂದು ಆತ್ಮಸಖ್ಯದ ಎಳೆಮೊಗ್ಗು ಬಾಳಕಡಲಲ್ಲಿ ಪುಟ್ಟ ನಾವೆಯ ಜೋಡಿಹುಟ್ಟು ಕಣ್ಣುಗಳ ಬೋಗುಣಿಗಳಲ್ಲಿ ಸ್ವಪ್ನಸಲಿಲ ನಿಶ್ಚಿತ ದಿನ ಜಾಗ ಅರ್ಥಗಳ ಹುಡುಕಾಟಕ್ಕೆ ಜೀವಗಳು ಜೊತೆಯಾಗಲು ಸಲಹಿದವರ ಗದ್ಗದಿತ ಕೊರಳುಗಳು ಉಲಿದವು "ನಿಶ್ಚಿತಾರ್ಥ!"