ಶುಕ್ರ ಸಂಕ್ರಮಣ

ಜೂನ್ ೬, ೨೦೧೨ ರಂದು ಒಂದು ಅಪರೂಪದ ವಿದ್ಯಮಾನ ಅಂತರಿಕ್ಷದಲ್ಲಿ ಸಂಭವಿಸಲಿದೆ. ಅದನ್ನು ನೇರವಾಗಿ ವೀಕ್ಷಿಸುವ ಅವಕಾಶ ಹೊಂದಿರುವ ನಾವೆಲ್ಲ ಅದೃಷ್ಟವಂತರೇ ಸರಿ! ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು, ಹವ್ಯಾಸಿಗಳು, ವೃತ್ತಿಪರರು, ವಿಜ್ಞಾನಾಸಕ್ತರು ಮತ್ತು ಸಾಮಾನ್ಯ ಜನತೆ ಕೂಡ ಅಂತರಿಕ್ಷದಲ್ಲಿ ನಡೆಯಲಿರುವ ಈ ದೃಶ್ಯ ಚಮತ್ಕಾರದ ವೀಕ್ಷಣೆಯ ಪ್ರತಿಕ್ಷಣವನ್ನೂ ಆನಂದಿಸಲು ಅಣಿಯಾಗುತ್ತಿದ್ದಾರೆ. ಅದುವೆ "ಶುಕ್ರ ಗ್ರಹದ ಸಂಕ್ರಮಣ"! ಶುಕ್ರ ಗ್ರಹವು ಕಪ್ಪು ಚುಕ್ಕಿಯಂತೆ ಸೂರ್ಯನ ಮೇಲೆ ಮಂದವಾಗಿ ಹಾದುಹೋಗಲಿದೆ ಮತ್ತು ಈ ಚಲನೆಯ ದೃಶ್ಯ ಸೂರ್ಯೋದಯದಿಂದ ಬೆಳಿಗ್ಗೆ ೧೦.೩೦ರ ವರೆಗೆ ಗೋಚರಿಸಲಿದೆ.

ಈ ವಿದ್ಯಮಾನ ಯಾಕೆ ಅಪರೂಪ ಮತ್ತು ನಾವೇಕೆ ಇದನ್ನು ವೀಕ್ಷಿಸಬಹುದಾದ ಭಾಗ್ಯಶಾಲಿಗಳು? ಜೂನ್ ೬, ೨೦೧೨ ರಂದು ಇದರ ವೀಕ್ಷಣೆ ತಪ್ಪಿಸಿಕೊಂಡಲ್ಲಿ ನಾವಿದನ್ನು ನಮ್ಮ ಜೀವಮಾನದುದ್ದಕ್ಕೂ ನೋಡಲಾರೆವು. ಕಾರಣ ಇದು ಮತ್ತೆ ಸಂಭವಿಸಲಿರುವುದು ೧೧ ಡಿಸೆಂಬರ್, ೨೧೧೭ಕ್ಕೆ. ಈ ಹಿಂದೆ ಇದೇ ರೀತಿಯ ಘಟನೆ ನಡೆದದ್ದು ಜೂನ್ ೮, ೨೦೦೪ರಲ್ಲಿ. 

ಇದು ಲೆಕ್ಕಾಚಾರ ಅಥವಾ ಇನ್ನಾವುದೇ ಅಳತೆಗೆ ಸಿಗದ ಯಾದೃಚ್ಛಿಕ ವಿದ್ಯಮಾನವಲ್ಲ. ಇದಕ್ಕೊಂದು ಕ್ರಮವಿದೆ. ಶುಕ್ರ ಸಂಕ್ರಮಣವು ೮ ವರ್ಷಗಳ ಅಂತರವಿರುವ ಜೋಡಿ ಇಸವಿಗಳಲ್ಲಿ ಸಂಭವಿಸುತ್ತದೆ. ಮಾತ್ರವಲ್ಲದೆ ಈ ಜೋಡಿ ಇಸವಿಗಳ ನಡುವಿನ ಅಂತರ ೧೨೧.೫ ಮತ್ತು ೧೦೫.೫ ವರ್ಷಗಳಂತೆ ಅದಲು ಬದಲಾಗುತ್ತಿರುತ್ತದೆ. ಈ ಕೆಳಗಿನ ಕೋಷ್ಠಕವನ್ನು ಗಮನಿಸಿ.


ಡಿಸೆಂಬರ್ ೧೬೩೧ - ಡಿಸೆಂಬರ್ ೧೬೩೯
ಶುಕ್ರ ಸಂಕ್ರಮಣದ  ೮ ವರ್ಷ ಅಂತರದ ಜೋಡಿ ಇಸವಿಗಳು 
ಜೂನ್ ೧೭೬೧ ಜೂನ್ ೧೭೬೯
ಈ ಜೋಡಿಯು  ಮೇಲಿನ ಜೋಡಿಯಿಂದ  ೧೨೧.೫  ವರ್ಷಗಳ ಅಂತರದಲ್ಲಿದೆ
ಡಿಸೆಂಬರ್ ೧೮೭೪ –  ಡಿಸೆಂಬರ್  ೧೮೮೨
ಈ ಜೋಡಿಯು  ಮೇಲಿನ ಜೋಡಿಯಿಂದ  ೧೦೫.೫  ವರ್ಷಗಳ ಅಂತರದಲ್ಲಿದೆ
ಜೂನ್ ೨೦೦೪ –  ಜೂನ್  ೨೦೧೨
ಈ ಜೋಡಿಯು  ಮೇಲಿನ ಜೋಡಿಯಿಂದ  ೧೨೧.೫  ವರ್ಷಗಳ ಅಂತರದಲ್ಲಿದೆ
ಡಿಸೆಂಬರ್ ೨೧೧೭ –  ಡಿಸೆಂಬರ್ ೨೧೨೫
ಈ ಜೋಡಿಯು  ಮೇಲಿನ ಜೋಡಿಯಿಂದ  ೧೦೫.೫  ವರ್ಷಗಳ ಅಂತರದಲ್ಲಿದೆ


ಶುಕ್ರಗ್ರಹ ಸಂಕ್ರಮಣ ಯಾಕೆ ಮುಖ್ಯ? 
ಶುಕ್ರಗ್ರಹ ಸಂಕ್ರಮಣ ವಿಜ್ಞಾನದ ದೃಷ್ಟಿಯಿಂದ ಅಪಾರ ಮಹತ್ವ ಪಡೆದುಕೊಂಡಿದೆ, ಅದು ಸೂರ್ಯನಿಂದ ಭೂಮಿ ಮತ್ತಿತರ ಗ್ರಹಗಳ ದೂರವನ್ನು ಅಳೆಯಲು ಬಹಳಷ್ಟು ಸಹಾಯಕಾರಿಯೆನಿಸಿದೆ. ಅದನ್ನು ಅರ್ಥ ಮಾಡಿಕೊಳ್ಳಲು ಶುಕ್ರಸಂಕ್ರಮಣದ ಇತಿಹಾಸವನ್ನು ಗಮನಿಸಬೇಕಿದೆ. ಸುಮಾರು ೧೫೦೦ ವರ್ಷಗಳವರೆಗೂ ಮನುಷ್ಯನು ಭೂಮಿಯು ಸೌರಮಂಡಲ ಮಾತ್ರವಲ್ಲದೆ ಇಡೀ ವಿಶ್ವದ ಕೇಂದ್ರ ಎಂದು ಭಾವಿಸಿದ್ದ. ಭೂಕೇಂದ್ರಿತ ವ್ಯವಸ್ಥೆ ಎಂದು ಕರೆಯಲ್ಪಡುವ ಈ ಪರಿಕಲ್ಪನೆಯನ್ನು ಅಂದಿನ ಚರ್ಚ್ ಕೂಡ ಬೆಂಬಲಿಸಿತ್ತು. ಅದಕ್ಕೆ ವೈಜ್ಞಾನಿಕ ವಾದಸರಣಿಯನ್ನು ಅಂದಿನ ಮೇರು ಖಗೋಳಶಾಸ್ತ್ರಜ್ಞ ಟಾಲೆಮಿ ಮಂಡಿಸಿದ್ದನಾದರೂ ಅದು ರಾತ್ರಿಯ ಆಕಾಶದಲ್ಲಿ ಇತರೆ ಗ್ರಹಗಳ ಚಲನೆಗಳನ್ನು ವಿವರಿಸುವಲ್ಲಿ ಅಸಮರ್ಪಕವಾಗಿತ್ತು, ೧೫ನೇ ಶತಮಾನದ ಯೂರೋಪ್ ನ ಪುನರುಜ್ಜೀವನ ಕಾಲದಲ್ಲಿ, ಗ್ರಹಗಳ ವಿಶಿಷ್ಟ ಚಲನೆಗಳನ್ನು ವಿವರಸಲು ಸಾಧ್ಯವಾಗುವುದು ಭೂಮಿಯನ್ನೂ ಒಳಗೊಂಡಂತೆ ಎಲ್ಲ ಗ್ರಹಗಳೂ ಸೂರ್ಯನ ಸುತ್ತ ಸುತ್ತುತ್ತಿವೆಯೆಂದು ಭಾವಿಸಿದರೆ ಮಾತ್ರ ಎಂದು ನಿಕೊಲಸ್ ಕೋಪರ್ನಿಕಸ್ ವಾದಿಸಿದ. ಈ ರೀತಿಯಾಗಿ ಸೂರ್ಯಕೇಂದ್ರಿತ ಮಾದರಿ (ಅಂದರೆ ಸೂರ್ಯನು ಸೌರಮಂಡಲದ ಕೇಂದ್ರವಾಗಿರುವುದು) ಜನ್ಮ ತಾಳಿತು. ಕೋಪರ್ನಿಕಸ್ ನ ಈ ವಾದ ಒಳಗೊಂಡ ಪುಸ್ತಕ ಬಿಡುಗಡೆಯಾಗುತ್ತಿದ್ದಂತೆಯೇ ಈ ದೃಷ್ಟಿಕೋನ ಸಾಂಪ್ರದಾಯಿಕ ನಂಬಿಕೆಗಳಿಗೆ ವಿರುದ್ಧವಾಗಿದ್ದ ಕಾರಣಕ್ಕೆ ನಿಷೇಧಕ್ಕೊಳಪಟ್ಟಿತು. 

ಗಯಾರ್ದಾನೊ ಬ್ರೂನೊ ಎಂಬ ಇಟಲಿಯ ಓರ್ವ ಯುವ ಸನ್ಯಾಸಿ ಗ್ರಂಥಾಲಯವೊಂದರಲ್ಲಿ ಸಿಕ್ಕ ಈ ಪುಸ್ತಕವನ್ನು ಓದಿ, ಅದರಲ್ಲಿರುವ ವಾದ ಒಪ್ಪಿಗೆಯಾಗಿ ಅದನ್ನು ಇಡೀ ಪ್ರಪಂಚಕ್ಕೆ ಸಾರಲು ನಿರ್ಧರಿಸಿದ. ೧೬೦೦ನೇ ಇಸವಿಯಲ್ಲಿ ಆ "ಅಪರಾಧ"ವನ್ನೆಸಗಿದ್ದಕ್ಕೆ ಅವನನ್ನು ಸಜೀವ ದಹಿಸಿ ಅವನು ತನ್ನ ಜೀವವನ್ನೇ ದಂಡ ತೆರುವಂತಾಯಿತು. ಅದೇ ಸಮಯಕ್ಕೆ ಇಟಲಿಯ ಪದುವಾ ವಿಶ್ವವಿದ್ಯಾಲಯದಲ್ಲಿ ಗೆಲಿಲಿಯೊ ಗೆಲಿಲಿ (೧೫೬೪-೧೬೪೨) ಅಧ್ಯಾಪನ ವೃತ್ತಿಯಲ್ಲಿದ್ದ. ಅವನು ಪ್ರಪಂಚದ ಮೊದಲ ದೂರದರ್ಶಕವನ್ನು ತಯಾರಿಸಿದ್ದ. ಚಂದ್ರನ ಮೇಲಿನ ಪರ್ವತಗಳು, ಶುಕ್ರನ ಚಲನೆಯ ವಿವಿಧ ಮಜಲುಗಳು, ಗುರುಗ್ರಹದ ಉಪಗ್ರಹಗಳು ಹೀಗೆ ಭೂಕೇಂದ್ರಿತ ವ್ಯವಸ್ಥೆಯ ಪರಿಕಲ್ಪನೆಯನ್ನು ಅಲ್ಲಗಳೆಯುವಂತಹ ಹಲವಾರು ಸಂಗತಿಗಳನ್ನು ಗುರುತಿಸಿ ಮನಗಂಡಿದ್ದ. ಅವನೂ ಸಹ ಇದನ್ನು ಪ್ರಪಂಚಕ್ಕೆ ತಿಳಿಸಲು ನಿರ್ಣಯಿಸಿದ. ಚರ್ಚ್ ಅದಕ್ಕೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿತು. ಅವನನ್ನು ಅಧ್ಯಾಪಕ ಹುದ್ದೆಯಿಂದ ಕೆಳಗಿಳಿಸಿ, ಗೃಹ ಬಂಧನದಲ್ಲಿಡಲಾಯಿತು. ಇಳಿವಯಸ್ಸಿನಲ್ಲಿ ಗೆಲಿಲಿಯೊ ಕಷ್ಟಕರ ಬದುಕು ನಡೆಸುವಂತಾಯಿತು. ಹೀಗಿದ್ದರು, ಸತ್ಯವನ್ನು ಸ್ಥಾಪಿಸಿ ಅದನ್ನು ಪ್ರಚುರಪಡಿಸಲು ತಮ್ಮ ಜೀವಗಳನ್ನೇ ಪಣಕ್ಕೊಡ್ಡಿಕೊಂಡ ಅಂದಿನ ಕಾಲದ ಸಾಹಸಿಗರು. ಕಡೆಗೆ ಸೂರ್ಯಕೇಂದ್ರಿತ ವ್ಯವಸ್ಥೆ ಪರಿಕಲ್ಪನೆಯೇ ಈ ಸಮರ ಗೆದ್ದು, ಸತ್ಯದ ಕೈ ಮೇಲಾಯಿತು.

ತದನಂತರ ಉದ್ಭವಗೊಂಡ ಪ್ರಮುಖ ಪ್ರಶ್ನೆಯೆಂದರೆ, "ಸೂರ್ಯ ಹಾಗೂ ಭೂಮಿಯ ನಡುವಿನ ದೂರ ಎಷ್ಟು?" ಎಂಬುದು. ೧೭೧೬ನೇ ಇಸವಿಯಲ್ಲಿ ಈ ಪ್ರಶ್ನೆಗೆ ಉತ್ತರ ಹುಡುಕುವ ಯತ್ನದಲ್ಲಿ ನ್ಯೂಟನ್ ನ ಗೆಳೆಯ ಎಡ್ಮಂಡ್ ಹ್ಯಾಲಿ ವಿನೂತನ ಉಪಾಯವೊಂದನ್ನು ರೂಪಿಸಿದ. ಇದಕ್ಕಾಗಿ ಅನೇಕ ಖಗೋಳಶಾಸ್ತ್ರಜ್ಞರ ಸಹಭಾಗಿತ್ವದಲ್ಲಿ, ದೂರದೂರದ ಜಾಗಗಳಿಗೆ ಅಸಾಧಾರಣ ಪ್ರತಿಕೂಲಗಳನ್ನೊಳಗೊಂಡ ಶೋಧಯಾನಗಳನ್ನು ಕೈಗೊಳ್ಳುವ ಅಗತ್ಯ ಒದಗಿ ಬಂತು. ಸೌರಮಂಡಲದ ಕುರಿತಾದ ಮಾನವನ ಗ್ರಹಿಕೆ ಈ ಯೋಜನೆಯ ಮೇಲೆ ಅವಲಂಬಿತವಾಗಿತ್ತು.

೧೭೬೧ರಲ್ಲಿ ಸಂಭವಿಸಲಿದ್ದ ಶುಕ್ರಸಂಕ್ರಮಣವನ್ನು ಭುವಿಯ ಬೇರೆ ಬೇರೆ ಭಾಗಗಳಿಂದ ಗಮನಿಸಿ, ಅದರ ಮಾಹಿತಿ ಒಟ್ಟುಗೂಡಿಸಿ, ಸೂರ್ಯ ಮತ್ತ್ತು ಭೂಮಿಯ ನಡುವಿನ ದೂರದ ಅಳತೆಯನ್ನು ಲೆಕ್ಕ ಹಾಕಲು, ಖಗೋಳಶಾಸ್ತ್ರಜ್ಞರಿಗೆ ಹ್ಯಾಲಿ ಕರೆ ನೀಡಿದ. ಆದರೆ ಅದನ್ನು ವೀಕ್ಷಿಸಲು ಸ್ವತಃ ತಾನೇ ಇರುವುದಿಲ್ಲ ಎಂಬುದು ಅವನಿಗೆ ತಿಳಿದಿತ್ತು! ಶುಕ್ರಸಂಕ್ರಮಣದ ಸಮಯ ಬಂದಾಗ ಎಲ್ಲ ವಿಜ್ಞಾನಿಗಳು ಮತ್ತು ಖಗೋಳಶಾಸ್ತ್ರಜ್ಞರು ಅತ್ಯಂತ ಶ್ರದ್ಧೆಯಿಂದ, ಬ್ರಿಟನ್ ಮತ್ತು ಫ಼್ರಾನ್ಸ್ ನಡುವಿನ ಯುದ್ಧದ ಪ್ರತಿಕೂಲಗಳನ್ನೂ ಎದುರಿಸಿ ಹ್ಯಾಲಿ ವಹಿಸಿದ ಕೆಲಸ ನಿರ್ವಹಿಸಿದರು. ಯುದ್ಧ ಪೀಡಿತ ಸಮುದ್ರ ಪ್ರದೇಶಗಳಲ್ಲಿ ನೌಕಾಯಾನ ನಡೆಸುವುದು ಪ್ರಾಣಕಂಟಕದ ವಿಚಾರವಾಗಿದ್ದರೂ ಸಹ ಆ ಧೈರ್ಯಶಾಲಿಗಳು ಅಗಾಧ ದೂರದ ಮಾರ್ಗಗಳನ್ನು ಕ್ರಮಿಸಿ ಮಾನವ ಸಂಕುಲಕ್ಕೆ ಸಮಸ್ಯೆಯಾಗಿರುವ ಆ ಪ್ರಶ್ನೆಗೆ ಉತ್ತರ ಹುಡುಕಲು ಅಲೆದಾಡಿದ್ದರು. ಇದು ವಿಜ್ಞಾನ ಪ್ರಪಂಚದಲ್ಲಿ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮಟ್ಟದ ಸಹಯೋಗ ಎನಿಸಿಕೊಂಡಿತ್ತು!

೧೭೬೯ರಲ್ಲಿ ಜರುಗಿದ ಶುಕ್ರಸಂಕ್ರಮಣವನ್ನು ಪ್ರಪಂಚದಾದ್ಯಂತ ೭೫ಕ್ಕೂ ಹೆಚ್ಚು ವೀಕ್ಷಣಾ ಘಟಕಗಳಿಂದ ನಡೆಸಿದ ಅವಲೋಕನ, ಸೂರ್ಯ ಮತ್ತು ಭೂಮಿಯ ನಡುವಿನ ಅಂತರ ೧೪.೯೭ ಕೋಟಿ ಕಿ.ಮೀ ಎಂದು ಜಗತ್ತಿಗೆ ತಿಳಿಯಪಡಿಸಿತು. ಇಂದಿನ ಆಧುನಿಕ ಕೌಶಲಗಳಿಂದ ಲಭ್ಯವಾಗಿರುವ ನಿಖರ ಮಾಪನಕ್ಕೆ ಇದು ತೀರಾ ಹತ್ತಿರದ ಅಳತೆಯೆನಿಸಿಕೊಂಡಿದೆ. 

ಇಂದು, ಕೆಪ್ಲರ್ ಆಕಾಶನೌಕೆಯು ಭೂಮಿಯಂತಿರುವ ಇತರೆ ಗ್ರಹಗಳನ್ನು ಪತ್ತೆ ಹಚ್ಚಲು, ವಿಶ್ವದ ಬೇರೆ ಬೇರೆ ನಕ್ಷತ್ರಗಳ ಸುತ್ತ ಪರಿಭ್ರಮಿಸುತ್ತಿರುವ ಗ್ರಹಗಳ ಸಂಕ್ರಮಣಗಳನ್ನು ಸೆರೆ ಹಿಡಿಯುತ್ತಿದೆ. ತನ್ನ ಉಡ್ಡಯನ ಮೊದಲುಗೊಂಡ ಮಾರ್ಚ್ ೨೦೦೯ ರಿಂದ ಇಲ್ಲಿಯವರೆಗೆ, ನೀರಿನ ಅಸ್ತಿತ್ವ ಇರಬಹುದಾದ, ತಮ್ಮ ತಮ್ಮ ಸೂರ್ಯರಿಂದ (ಆ ಗ್ರಹಗಳು ಸುತ್ತುಹಾಕುವ ನಕ್ಷತ್ರಗಳಿಂದ) ಸುರಕ್ಷಿತ ಅಂತರದಲ್ಲಿ ಇರುವ ೫೦ಕ್ಕೂ ಹೆಚ್ಚು ಗ್ರಹಗಳನ್ನು ಬೆಳಕಿಗೆ ತಂದಿದೆ. ಹಾಗೆಯೇ, ಜೀವರಾಶಿಯ ಇರುವಿಗಾಗಿ ನೀರು ಅತ್ಯವಶ್ಯಕ ಎಂಬುದು ನಮಗೆ ತಿಳಿದಿದೆಯಷ್ಟೆ. ಈ ಪ್ರಕಾರವಾಗಿ ಆಕಾಶಕಾಯಗಳ ಸಂಕ್ರಮಣಗಳು ಸೌರಮಂಡಲದಾಚೆ ಇರಬಹುದಾದ ಜೀವಿಗಳ ಅನ್ವೇಷಣೆಗೆ ಸಹಾಯಕಾರಿಯಾಗಿವೆ. 

ಈ ವಿದ್ಯಮಾನವನ್ನು ವೀಕ್ಷಿಸುವುದು ಹೇಗೆ? 
ಇಲ್ಲಿ ಸೂರ್ಯನ ದೀರ್ಘಾವಧಿಗಳ ವೀಕ್ಷಣೆಯಿರುವುದರಿಂದ, ಮುನ್ನೆಚ್ಚರಿಕೆವಹಿಸುವುದು ಅವಶ್ಯಕ. ಸೂರ್ಯನ ಪ್ರಕಾಶಮಾನ ಕಿರಣಗಳು ಅಕ್ಷಿಪಟಲವನ್ನು ಸುಟ್ಟು ಶಾಶ್ವತ ದೃಷ್ಟಿ ಹಾನಿಯುಂಟಾಗಬಹುದಾದ್ದರಿಂದ ಸೂರ್ಯನನ್ನು ನೇರವಾಗಿ ನೋಡಲಾಗದು. ಮಸಿಹಿಡಿದ ಗಾಜು, ಕ್ಷ-ಕಿರಣದ ಹಾಳೆಗಳು ಇತ್ಯಾದಿಗಳಾವುದನ್ನೂ ಉಪಯೋಗಿಸಬಾರದು. ಕಾರಣ, ಅವು ಸೂರ್ಯನ ಬೆಳಕಿನ ಪ್ರಖರತೆಯನ್ನು ಸಮಾನ ಪ್ರಮಾಣಗಳಲ್ಲಿ ತಗ್ಗಿಸುವುದಿಲ್ಲ. ಅಷ್ಟಲ್ಲದೆ, ಅವುಗಳ ಅಸಮಾನ ದಟ್ಟಣೆಯಿಂದಾಗಿ ಪ್ರಖರ ಕಿರಣಗಳು ನುಸುಳಿ ಅಕ್ಷಿಪಟಲದ ಸಣ್ಣ ಸೂಕ್ಷ್ಮ ಭಾಗಗಳನ್ನು ಹಾನಿಗೊಳಪಡಿಸಬಹುದಾಗಿದೆ.

ಕಪ್ಪು ಪಾಲಿಮರ್ ಪದರಗಳಿಂದ ಮಾಡಲ್ಪಟ್ಟ, ಕಿರಣಗಳ ಪ್ರಖರತೆಯನ್ನು ೧ ಲಕ್ಷ ಪಟ್ಟು ತಗ್ಗಿಸುವ ಸೋಸು ಕನ್ನಡಕಗಳನ್ನು ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ತಯಾರಿಸಿದೆ. ಹೀಗಾಗಿ ಅವು ಈ ನಿಟ್ಟಿನಲ್ಲಿ ಸುರಕ್ಷಿತ. ಮೊದಲನೆಯದಾಗಿ, ಇಂತಹ ಪದರಗಳಲ್ಲಿ ದಪ್ಪ ಮತ್ತು ದಟ್ಟಣೆಯಲ್ಲಿ ಅತ್ಯುನ್ನತ ಮಟ್ಟದ ಸಮಾನತೆಯನ್ನು ಕಾಯ್ದುಕೊಂಡಿರಲಾಗುತ್ತದೆ. ಎರಡನೆಯದಾಗಿ, ಸೂರ್ಯನ ಹಾನಿಕಾರಕ ಕಿರಣಗಳನ್ನು ಹೀರಿಕೊಳ್ಳುವ ವಸ್ತುವು ಎರಡು ಪದರಗಳ ನಡುವೆ ರಕ್ಷಿಸಲ್ಪಟ್ಟಿರುತ್ತದೆ. ಬೆಳಕಿನ ಪ್ರಖರತೆಯನ್ನು ೧ ಲಕ್ಷ ಪಟ್ಟು ತಗ್ಗಿಸುವ ಸೋಸು ಕನ್ನಡಕದ ಕ್ಷಮತೆಯನ್ನು ಪರೀಕ್ಷಿಸಲು, ೧೦೦ ವ್ಯಾಟ್ ತಾಪ ಜ್ವಲನದ ದೀಪ (Incandescent bulb)ವೊಂದನ್ನು ಕನ್ನಡಕ ಹಿಡಿದು ವೀಕ್ಷಿಸಿ. ಆ ದೀಪದ ಒಳತಂತಿ ಮಾತ್ರ ಮಬ್ಬಾಗಿ ಕಾಣುತ್ತಿರಬೇಕು. ಈ ವಿಶಿಷ್ಟ ವಿದ್ಯಮಾನದ ಸಮೂಹ ವೀಕ್ಷಣೆಗೆ ಇರುವ ಇತರೆ ಮಾರ್ಗಗಳೆಂದರೆ, ಸೂಕ್ಷ್ಮ ರಂಧ್ರ ಬಿಂಬ ಗ್ರಾಹಕ (pin-hole camera) ಇಲ್ಲವಾದಲ್ಲಿ ದೂರದರ್ಶಕದ ಮೂಲಕ ಸೂರ್ಯನ ಬಿಂಬವನ್ನು ಗೋಡೆ ಅಥವಾ ಬಿಳಿಯ ಪರದೆಯ ಮೇಲೆ ಹಾಯಿಸುವುದು.

ಸಾರ್ವಜನಿಕ ಸಂಕ್ರಮಣ ವೀಕ್ಷಣಾ ಕಾರ್ಯಕ್ರಮಗಳನ್ನು ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ದೇಶದಾದ್ಯಂತ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ, ಉದ್ಯಾನವನಗಳಲ್ಲಿ ಮತ್ತು ಮೈದಾನಗಳಲ್ಲಿ ಜೂನ್ ೬ರಂದು ಆಯೋಜಿಸಿದೆ.

ಶುಕ್ರಸಂಕ್ರಮಣ ಮತ್ತು ಜ್ಯೋತಿಷ್ಯ: 
ನಮ್ಮೆಲ್ಲರ ಬದುಕುಗಳ ಮೇಲೆ ಶುಕ್ರಸಂಕ್ರಮಣದ ಪರಿಣಾಮದ ಭವಿಷ್ಯಕಥನಗಳು ಈಗಾಗಲೆ ಹೊರಬಿದ್ದಿವೆ. ಈ ಸಂಕ್ರಮಣವು ಯಾವಾಗಲೂ ಜೂನ್ ಅಥವಾ ಡಿಸೆಂಬರ್ ತಿಂಗಳುಗಳಲ್ಲಿ ನಡೆಯುವುದರಿಂದ ಬಹಳಷ್ಟು ಜ್ಯೋತಿಷಿಗಳು ಮಿಥುನ ಮತ್ತು ಕುಂಭ ರಾಶಿಗಳನ್ನು ಬಳಸಿ ಶುಕ್ರಸಂಕ್ರಮಣದ ಪರಿಣಾಮಗಳ ಭವಿಷ್ಯವನ್ನು ನುಡಿಯುತ್ತಿದ್ದಾರೆ. ಯಾರಾದರೊಬ್ಬ ಜ್ಯೋತಿಷಿ ಜನರಿಗೆ ತಮ್ಮ ತಮ್ಮ ನಿವಾಸಗಳಿಂದ ಸಂಕ್ರಮಣದ ಸಮಯದಲ್ಲಿ ಹೊರಬರದಿರಲು ಸಲಹೆ ನೀಡಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಒಂದು ವಿಷಯವನ್ನು ಮನದಟ್ಟು ಮಾಡಿಕೊಳ್ಳೋಣ. ಜ್ಯೋತಿಷ್ಯವು ಯಾವುದೇ ವೈಜ್ಞಾನಿಕ ಊಹೆಗಳನ್ನು ಮಾಡಲು ಅಸಮರ್ಥವಾಗಿದೆ. ಅದು ಯಾವುದೇ ರೀತಿಯ ವಿಜ್ಞಾನವಲ್ಲ ಮತ್ತು ಕಟ್ಟುನಿಟ್ಟಿನ ವೈಜ್ಞಾನಿಕ ರೀತಿ-ನೀತಿಗಳಿಂದ ಸಂಪಾದಿಸಿದ ಯಾವ ಜ್ಞಾನವನ್ನೂ ಅದು ಒಳಗೊಂಡಿಲ್ಲ. ಆದ್ದರಿಂದ, ಬನ್ನಿ, ಸಂಕ್ರಮಣದ ನಯನ ಮನೋಹರ ದೃಶ್ಯವನ್ನು ನೋಡಿ ಆನಂದಿಸಿ. ಈ ಪ್ರಕ್ರಿಯೆಯಲ್ಲಿ ಮೂಢನಂಬಿಕೆಯ ಮೇಲೆ ವಿಜ್ಞಾನ ಸಾಧಿಸುವ ವಿಜಯಕ್ಕೆ ಸಾಕ್ಷಿಯಾಗಿ! 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9535246513, 9986033579

(ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯ ಆಂಗ್ಲ ಕರಪತ್ರದ ಕನ್ನಡಾನುವಾದ)


ಸಂಯುಕ್ತ ಕರ್ನಾಟಕದಲ್ಲಿ ಈ ಲೇಖನ

Comments

Chamaraj Savadi said…
ಸನ್ಮಾನ್ಯ ಸೂರ್ಯಕಿರಣ್‌ ಅವರೇ,

ಶುಕ್ರ ಸಂಕ್ರಮಣದ ಕುರಿತು ನೀವು ಬರೆದ ಬರಹವನ್ನು ನಿಮ್ಮ ಪೂರ್ವಾನುಮತಿಯಿಲ್ಲದೇ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ (೨-೬-೨೦೧೨, ಪುಟ ೧೩)ಮರುಪ್ರಕಟಿಸಿದ್ದೇನೆ. ನಿಮ್ಮ ಈಮೇಲ್‌ ವಿಳಾಸ ನನಗೆ ಸಿಗಲಿಲ್ಲ. ಅಂತಿಮ ಕ್ಷಣದಲ್ಲಿ ಫೋನ್‌ ಮಾಡಬೇಕೆಂಬುದು ಹೊಳೆಯಲಿಲ್ಲ. :)

ಲೇಖನದ ಕೊಂಡಿ ಇಲ್ಲಿದೆ: http://epaper.samyukthakarnataka.com/40461/Samyuktha-Karnataka/June-02-2012-Ba#page/13/1

ಲೇಖನ ಸಂದರ್ಭೋಚಿತವಾಗಿತ್ತು. ಅದಕ್ಕಾಗಿ ಧನ್ಯವಾದಗಳು.

ನಿಮ್ಮ ಲೇಖನಗಳನ್ನು ಮರುಪ್ರಕಟಿಸಿದರೆ ಅಭ್ಯಂತರವಿಲ್ಲವೆ? ದಯವಿಟ್ಟು ಈ ಕುರಿತು ನನಗೊಂದು ಮೇಲ್‌ ಹಾಕಬಲ್ಲಿರಾ?

ನನ್ನ ಈಮೇಲ್‌ ವಿಳಾಸ: chamarajs(AT)gmail(DOT)com

Popular posts from this blog

ಮಾತು-ಮೌನ-ಮನಸ್ಸು

ನಿರೀಕ್ಷೆ

ಗುಂಗು ಹಿಡಿಸುವ ಮಧುರಾನುಭವ