ಗೆಳೆಯನ ಬೀಳ್ಕೊಡುಗೆಗೆ ಎರಡು ಕವಿತೆಗಳು

ಇದು ವಿದಾಯವಲ್ಲ

ನೆನಪಿನ ಹೂಗುಚ್ಛದ ಕಟ್ಟು ಬಿಚ್ಚಿಟ್ಟು ಕೂತಿರುವೆ
ಯಾವ ಹೂವು ಮೊದಲು ಯಾವುದು ಕೊನೆಯದು?
ಮೊದಲು ತಿಳಿದಿಲ್ಲ ಕೊನೆಯದಿದೆಂದು ಹೇಳಲು ಮನಸಿಲ್ಲ
ಮೊದಲು ಕೊನೆಗಳ ಹಂಗು ಈಗೇಕೆ?

ಯಾವ ದಳದೊಳಿತ್ತು ಸ್ನೇಹದ ಎಳೆ?
ಯಾವ ಬಣ್ಣದೊಳಿತ್ತು ವಿಶ್ವಾಸದ ಸೆಲೆ?
ದಳಗಳ ನವಿರು, ಬಣ್ಣಗಳ ಹೊಳಹು
ಹುಡುಕಾಟದ ತಳಮಳ ಇಂದೇ ಮೂಡಬೇಕೆ!

ನಾಳೆ ಭೇಟಿಯಾಗದ ಮಾತ್ರಕೆ
ಮಾತುಕತೆಗಳಿರದ ಮಾತ್ರಕೆ
ಹೆಜ್ಜೆ ಭಾರವಾಗಲೇಬೇಕೆ?
ಇಂದು ವಿದಾಯ ಹೇಳಲೇಬೇಕೆ?

ಇಲ್ಲ, ನಾ ಭಾವುಕನಾಗಲಾರೆ
ಅಗಲಿಕೆಯನೊಪ್ಪಿ ಸೋತರಲ್ಲವೆ ವಿದಾಯದ ಮಾತು!
ಮಾತಿಗಿಳಿದಿರುವೆನು ದಳಗಳೊಡನೆ
ಜೋಡಿಸುತಿರುವೆ ನೆನಪಿನ ಹೂಗಳ

ಸರಿದ ಘಳಿಗೆಗಳೆಲ್ಲ ಕೈಜಾರಿದರೂ
ನೆನಪುಗಳೆಲ್ಲ ಈ ಹೂಗಳಲ್ಲಿ ಹುದುಗಿವೆಯಲ್ಲ
ಒಡನಾಟಗಳು ಇಲ್ಲವೆಂದರೂ
ಈ ಸ್ನೇಹ ಮುಗಿಯದಲ್ಲ

ನಗುವ ಹೂಗಳ ನೋಡಿಯಾದರೂ
ಪುನರ್ಮಿಲನದ ಕನಸುಗಳನ್ನು ಕೈಬಿಡಲಾರೆ
ಎಲ್ಲ ವಿದಾಯಗಳಂತಲ್ಲ ಇದು
ಅಷ್ಟರಲ್ಲೆ ಮರೆತೆ, ಇದು ವಿದಾಯವೇ ಅಲ್ಲ!


ಹೊರಳು ಹಾದಿ ಹಿಡಿದು ನಿಂತ ಗೆಳೆಯ

ಹೊರಳು ಹಾದಿ ಹಿಡಿದು ನಿಂತ ಗೆಳೆಯ,
ಪಯಣವಿದು ಮುಗಿದಂತಲ್ಲ
ಬದುಕಿನ ಬಿಡಾರ ಬದಲಾಗುತಿದೆಯಷ್ಟೆ
ನಮ್ಮೀ ಅಗಲಿಕೆ
ಇರುಳು ತಾರೆಗಳ ಬೀಳ್ಕೊಟ್ಟಂತೆ
ಚೈತ್ರವು ಚಿಗುರುಗಳ ತೊರೆದಂತೆ
ನದಿಯು ದ್ವೀಪದಲಿ ಕವಲೊಡೆದಂತೆಯೇ
ಮತ್ತೆ ಸೇರುವ ಮತ್ತೆ ಕೂಡುವ
ಕನಸುಗಳನು ಪೊರೆಯುವಂತಾಗಲಿ
ಮನಸುಗಳನು ಭಾರವಾಗಿಸದಿರಲಿ

Comments

Anonymous said…
ಈ ಕವಿತೆ ಬಹಳ ಚೆಂದವಾಗಿದೆ ಕಿರಣ್ ಅಣ್ಣಾ ..
Anonymous said…
ಈ ಸಾಲು ತುಂಬಾ ಅದ್ಭುತವಾಗಿದೆ ಕಿರಣ್ ಅಣ್ಣಾ

Popular posts from this blog

ಮಾತು-ಮೌನ-ಮನಸ್ಸು

ಗುಂಗು ಹಿಡಿಸುವ ಮಧುರಾನುಭವ

ನಿರೀಕ್ಷೆ